== ಸ್ಥಳ == ಕನ್ನಡಕುದ್ರು ಭಾರತದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಒಂದು ಸಣ್ಣ ದ್ವೀಪವಾಗಿದೆ. ಇದು ಕುಂದಾಪುರದ ಉತ್ತರ ಭಾಗದಲ್ಲಿದೆ. ಹೆಮ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಈ ಕುದ್ರು ವಿಶೇಷ ಕುದ್ರು (ದ್ವೀಪ) ಗಳಲ್ಲಿ ಒಂದಾಗಿದೆ. ಅರಾಟೆ ಸೇತುವೆಯು ಈ ದ್ವೀಪವನ್ನು ಮುಖ್ಯ ಭೂಮಿಯೊಂದಿಗೆ ಸಂಪರ್ಕಿಸುತ್ತದೆ. ಇದು ಹೆಮ್ಮಾಡಿ ಬಳಿ ಎನ್ಎಚ್೬೬ ನಿಂದ ಕೇವಲ ಒಂದು ಕಿ.ಮೀ ದೂರದಲ್ಲಿದೆ. ಈ ದ್ವೀಪವು ಪುರಾತನ ಕಿರು ಇಗರ್ಜಿಗೆ ನೆಲೆಯಾಗಿದೆ. == ವಿಶೇಷತೆ == ಮೂಲತಃ ಸೌಪರ್ಣಿಕಾ ಮತ್ತು ಪಂಚಗಂಗಾವಳಿ ನದಿಗಳಿಂದ ಸುತ್ತುವರೆದಿರುವ ಈ ದ್ವೀಪವು ವಸತಿ ದ್ವೀಪವಾಗಿದೆ. ಸುಮಾರು ೩೦೦ ವರ್ಷಗಳ ಹಿಂದೆ, ಕ್ರಿಶ್ಚಿಯನ್ ಮತ್ತು ಹಿಂದೂ ಸಮುದಾಯಕ್ಕೆ ಸೇರಿದ ಜನರು ಕೆಮ್ಮಣ್ಣು ಪ್ರದೇಶದಿಂದ ವಲಸೆ ಬಂದು ಇಲ್ಲಿ ನೆಲೆಸಿದ್ದರು. ಈ ದ್ವೀಪವು ೬೦ ಮನೆಗಳು ಮತ್ತು ೧೦೦ ಎಕರೆ ಕೃಷಿ ಭೂಮಿಯನ್ನು ಹೊಂದಿದೆ. ಇಲ್ಲಿ ವಾಸಿಸುವ ೬೦೦ ಕ್ಕೂ ಹೆಚ್ಚು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಭತ್ತ ಮತ್ತು ತೆಂಗು ಇಲ್ಲಿನ ಮುಖ್ಯ ಬೆಳೆಗಳಾಗಿವೆ. ಈ ದ್ವೀಪವು ಮರಳು ಗಣಿಗಾರಿಕೆಗೂ ಹೆಸರುವಾಸಿಯಾಗಿದೆ. == ಮಾರ್ಗ ಸೂಚಿ == ಇದು ಜಿಲ್ಲಾ ಕೇಂದ್ರ ಉಡುಪಿಯಿಂದ ಉತ್ತರಕ್ಕೆ ೪೪ ಕಿ.ಮೀ ದೂರದಲ್ಲಿದೆ. ಹಾಗೂ ಕುಂದಾಪುರದಿಂದ ೬ ಕಿ.ಮೀ ದೂರದಲ್ಲಿದೆ. ಕುಂದಾಪುರ ಕಡೆಯಿಂದ ಬರುವಾಗ ಹೆಮ್ಮಾಡಿ ಬಳಿಯ ಹೆದ್ದಾರಿಯಿಂದ ಎಡಕ್ಕೆ ತಿರುಗಿದರೆ ಕನ್ನಡಕುದ್ರು ಸಿಗುವುದು. === ರೈಲು ಮೂಲಕ === ಸೇನಾಪುರ ರೈಲು ನಿಲ್ದಾಣ, ಕುಂದಾಪುರ ರೈಲು ನಿಲ್ದಾಣಗಳು ಕನ್ನಡಕುದ್ರುವಿಗೆ ಸಮೀಪದ ರೈಲು ನಿಲ್ದಾಣಗಳಾಗಿವೆ. ಬಿಜೂರ್ ರೈಲು ನಿಲ್ದಾಣ (ಕುಂದಾಪುರದ ಹತ್ತಿರ), ಶಿರೂರು ರೈಲು ನಿಲ್ದಾಣ (ಭಟ್ಕಳದ ಹತ್ತಿರ), ಭಟ್ಕಳ ರೈಲು ನಿಲ್ದಾಣ (ಭಟ್ಕಳದ ಹತ್ತಿರ) ಇವುಗಳು ಹತ್ತಿರದ ಪಟ್ಟಣಗಳಿಂದ ತಲುಪಬಹುದಾದ ರೈಲು ನಿಲ್ದಾಣಗಳಾಗಿವೆ. === ರಸ್ತೆ ಮೂಲಕ === ಕುಂದಾಪುರ ಮತ್ತು ಭಟ್ಕಳ ಕನ್ನಡಕುದ್ರುವಿಗೆ ರಸ್ತೆ ಸಂಪರ್ಕವನ್ನು ಹೊಂದಿರುವ ಪಟ್ಟಣಗಳಾಗಿವೆ. == ಉಲ್ಲೇಖಗಳು ==